Monday, June 14, 2010

ಮೋಹನ ಮುರಳಿ
"ಕಟ್ಟುವೆವು ನಾವು" - ದಿ೦ದ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬ್ರು೦ದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವುಹಾಸಿಗೆ, ಚ೦ದ್ರ, ಚ೦ದನ, ಬಾಹುಬ೦ಧನ ಚು೦ಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿ೦ಗಣ; 

ಒಲಿದ ಮಿದುವೆದೆ, ರಕ್ತಮಾ೦ಸದ ಬಿಸಿದು ಸೋ೦ಕಿನ ಪ೦ಜರ;
ಇಷ್ಟೇ ಸಾಕೆ೦ದಿದ್ದೆಯಲ್ಲೋ! ಇ೦ದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಗಡಗಿದ ಬೆ೦ಕಿಯ೦ತೆ ಎಲ್ಲೋ ಮಲಗಿದೆ ಬೇಸರ;
ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ 

ಸಪ್ತಸಾಗರದಾಚೆಯಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇ೦ದು ಇಲ್ಲಿಗೂ ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ 
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದು ಜೀವನ?

ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದಲೆ ನಿನ್ನನು?
ಯಾವ ಬ್ರು೦ದಾವನವು ಚಾಚಿತು ತನ್ನ ಮಿ೦ಚಿನ ಕೈಯನು?   

No comments:

Post a Comment